ಕಲಬುರ್ಗಿ, ಮೇ.12- ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಜೂನ್ 1ರಂದು ಬೆಳಿಗ್ಗೆ ಹತ್ತರಿಂದ ಸಂಜೆ 6 ಗಂಟೆಯವರೆಗೆ ವೀರಶೈವ ಲಿಂಗಾಯತರ ಎಲ್ಲ ಒಳಪಂಗಡಗಳ ವಧು- ವರರ ಬೃಹತ್ ತೃತೀಯ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ. ಶರಣಕುಮಾರ್ ಮೋದಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣಬಸವೇಶ್ವರ ಸಂಸ್ಥಾನ, ಮಹಾಸಭೆ ಹಾಗೂ ಶಿವಪಾರ್ವತಿ ಮ್ಯಾಟ್ರಿಮೋನಿಯಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೂರನೇ ಬಾರಿಗೆ ಸಮಾಜದ ಬೃಹತ್ ರಾಜ್ಯ ಮಟ್ಟದ ಸಮಾವೇಶ ಜರುಗಲಿದೆ ಎಂದರು.
ಸಮಾವೇಶದಲ್ಲಿ ಲಿಂಗಾಯತ ಒಳಪಂಗಡಗಳಾದ ಜಂಗಮ, ಪಂಚಮಸಾಲಿ, ದೀಕ್ಷ, ಆದಿ, ಬಣಜಿಗ, ಬಣಗಾರ, ರೆಡ್ಡಿ ಮತ್ತು ಒಳಪಂಗಡ ಶಿವಸಿಂಪಿಗ, ನೇಕಾರ, ಕುಂಬಾರ, ಹಠಗಾರ, ಮಾಲಗಾರ, ಗಾಣಿಗರು, ಸಜ್ಜನ ಗಾಣಿಗ, ಕರಿಕುಲ ಗಾಣಿಗ, ಕರುವಿನಶೆಟ್ಟಿ, ಹೂಗಾರ, ಕುಡ್ಡ ಒಕ್ಕಲಿಗ ಮೊದಲಾದ ಎಲ್ಲ ಲಿಂಗಾಯತ ಒಳಪಂಗಡಗಳ ಸಮಾಜ ಬಾಂಧವರು ವಧು- ವರರ ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲ ವರ್ಗದ ಸಮಾಜ ಬಾಂಧವರು, ವಿಶೇಷವಾಗಿ ವೈದ್ಯರು, ಇಂಜನಿಯರರು, ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ವಾಸವಾಗಿರುವ ಹಾಗೂ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ, ಅರೆ ಸರ್ಕಾರಿ, ನೌಕರಸ್ಥರು, ವ್ಯಾಪಾರಸ್ಥರು, ರೈತ ಕುಟುಂಬದ ವಧು- ವರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಹಾಗೂ ಮರು ಮದುವೆ ಹಾಗೂ ವಿಳಂಬ ಮದುವೆ ಬಯಸುವವರೂ ಸಹ ಸಮಾವೇಶದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಕಡ್ಡಾಯವಾಗಿ ವಧು- ವರರು ಪಾಲ್ಗೊಳ್ಳಬೇಕು. ವಧು ಅಥವಾ ವರರ ಜೊತೆ ಇಬ್ಬರಿಗೆ ಮಾತ್ರ ಅವಕಾಶ ಇದೆ. ವಧು- ವರರು ಬರುವಾಗ ಸಂಪೂರ್ಣ ಬಯೋಡಾಟಾ ಮತ್ತು ಅಂಚೆ ಕಾರ್ಡ್ ಅಳತೆಯ ಭಾವಚಿತ್ರ ತರಬೇಕು. ಮುಂಚಿತವಾಗಿ ನೊಂದಣಿ ಮಾಡಿಸುವವರು ಸಂಯೋಜಕರ ಮೂಲಕ ಮೇ 30ರೊಳಗಾಗಿ ನೊಂದಣಿ ಮಾಡಿಸಿದವರ ಭಾವಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 1000ರೂ.ಗಳ ಪ್ರವೇಶ ಶುಲ್ಕವಿದೆ. ನೊಂದಣಿ ಇಲ್ಲದವರೆಗೆ ಒಳಗೆ ಪ್ರವೇಶವಿಲ್ಲ. ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶದ ದಿನವೂ ನೊಂದಣಿ ಮಾಡಿಸಬಹುದು. ಆದಾಗ್ಯೂ, ಭಾವಚಿತ್ರಗಳನ್ನು ಪ್ರದರ್ಶಿಸಲಾಗುವುದಿಲ್ಲ. ಆದಾಗ್ಯೂ, ನೇರವಾಗಿ ವೇದಿಕೆಯಲ್ಲಿ ಪರಿಚಯಿಸಲಾಗುವುದು. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ದೇಶಮುಖ್, ಮುಖ್ಯ ಸಂಯೋಜಕರಾದ ಶ್ರೀಮತಿ ಬಸವರಾಜೇಶ್ವರಿ ಕಕ್ಕೇರಿ ಚಂದ್ರಶೇಖರ್, ಕಲ್ಯಾಣರಾವ್ ಯಲಮಡಗಿ, ವೀರೇಶ್ ಗಂಧದಮಠ್, ಗುರುಪಾದಪ್ಪಾ ಪಲ್ಲಕ್ಕಿ, ಸಂಜೀವಕುಮಾರ್ ಕಪಲಾಪೂರ್, ಕರಿಬಸವೇಶ್ವರ, ಶ್ರೀಮತಿ ಸುವರ್ಣಾ ಮಠಪತಿ, ಡಾ. ಸುಧಾ ಹಾಲಕಾಯಿ ಮುಂತಾದವರು ಉಪಸ್ಥಿತರಿದ್ದರು.