ಕಾಂಗೈ ಭದ್ರಕೋಟೆ ಛಿದ್ರ ಡಿಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ ಅಧ್ಯಕ್ಷರಾಗಿ ತೇಲ್ಕೂರ ಆಯ್ಕೆ

0
1383

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಜ. 8: ಕಾಂಗೈ ಭದ್ರಕೋಟೆಯಾಗಿದ್ದ ಕಲಬುರಗಿ, ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಛಿದ್ರವಾಗಿದ್ದು, ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಜೆಪಿ ತೆಕ್ಕೆಗೆ ಹೋಗಿದೆ.
ಕಳೆದ ತಿಂಗಳು ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯ ಸ್ಥಾನಕ್ಕಾಗಿ ಚುನಾವಣೆ ನಡೆದಿತ್ತು, ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಸೇಡಂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸುರೇಶ ಸಜ್ಜನ ಅವರು ಆಯ್ಕೆಯಾಗಿದ್ದಾರೆ.
ಒಟ್ಟು 16 ಸದಸ್ಯ ಬಲದ ಬ್ಯಾಂಕಿನ ನಿರ್ದೇಶಕರ ಪೈಕಿ ಮೂರು ಜನರನ್ನು ಅಮಾನತ್ತುಗೊಳಿಸಿದ ಹಿನ್ನೆಲೆಯಲ್ಲಿ ಹಾಜಿರಿದ್ದ 12 ಸದಸ್ಯರು ಸೇರಿದಂತೆ ನಾಮನಿರ್ದೇಶಿತ ಮೂರು ಜನ ಸೇರಿದಂತೆ ಒಟ್ಟು 13 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜಕುಮಾರ ಪಾಟೀಲ್ ಅವರ ಪರವಾಗಿ 9 ಮತಗಳು ಬಂದರೆ ವಿರುದ್ಧವಾಗಿ 4 ಮತಗಳು ಬಂದವು.
ಉಪಾಧ್ಯಕ್ಷರಾಗಿ ಸ್ಪರ್ಧಿಸಿದ್ದ ಸುರೇಶ ಸಜ್ಜನ ಅವರಿಗೆ ಕೂಡಾ ಪರವಾಗಿ 9 ಮತಗಳು ಹಾಗೂ ವಿರೋಧವಾಗಿ 4 ಮತಗಳು ಬಂದವು.
ಅಧ್ಯಕ್ಷ ಸ್ಥಾನಕ್ಕೆ ರಾಜಕುಮಾರ ಪಾಟೀಲ್ ಅವರ ಹೆಸರನ್ನು ಸುರೇಶ ಸಜ್ಜನ ಅವರು ಸೂಚಿಸಿದಾಗ, ಇನ್ನೊರ್ವ ನಿರ್ದೇಶಸಕ ನಿಂಗಣ್ಣ ಮಾಳಪ್ಪ ದೊಡ್ಡಮನಿ ಅವರು ಅನುಮೋದಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ ಸಜ್ಜನ ಅವರ ಹೆಸರನ್ನು ಶಿವಾನಂದ ಮಾನಕರ್ ಅವರು ಸೂಚಿಸಿದರೆ ಅದನ್ನು ಶರಣಬಸಪ್ಪ ಬಸವಂತರಾಯ ಪಾಟೀಲ್ ಅವರು ಅನುಮೋದಿಸಿದರು.
ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತರು ಇಬ್ಬರನ್ನು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮುಂದಿನ ಐದು ವರ್ಷಗಳ ಅವಧಿಗಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಮೂರು ನಿರ್ದೇಶಕರ ಅಮಾನತ್ತು:
ಸಹಕಾರ ನಿಯಮಗಳ ಪ್ರಕಾರ ಮೂರು ಜನ ನಿರ್ದೇಶಕರಾದ ಗೌತಮ ಪಾಟೀಲ್, ಸೋಮಶೇಖರ ಗೋನಾಯಕ ಮತ್ತು ಬಾಪುಗೌಡ ಅವರುಗಳನ್ನು ಅಮಾನತ್ತು ಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here