ಅಕ್ರಮ ಚಟುಚಟಿಕೆಗಳಿಗೆ ಕಡಿವಾಣ ಹಾಕಲು ವಿಫಲ, ಅಧಿಕಾರಿಗಳಿಗೆ ಸಚಿವರ ತೀವ್ರ ತರಾಟೆ

0
804

ಕಲಬುರಗಿ, ಜೂನ್. 20: ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಜೂಜೂ, ಕ್ರಿಕೆಟ್ ಗ್ಯಾಂಬ್ಲಿAಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇಕೆ? ನಿಮಗೆ ಗೊತ್ತಿಲ್ಲದೆ ಈ ಎಲ್ಲ ದಂಧೆ ನಡೆಯುತ್ತಿವೆಯಾ ? ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಜೂಜು, ಅಕ್ರಮ ಮರುಳು ಸಾಗಾಣಿಕೆ, ಗ್ಯಾಂಬ್ಲಿAಗ್, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ದಂತ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ನಿಮಗೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ಕೂಡಾ ಅವರೊಂದಿಗೆ ಶಾಮೀಲಾಗಿದ್ದೀರಿ ಎಂದು ಅರ್ಥ. ಇತ್ತೀಚಿಗೆ ಪೊಲೀಸ್ ಇಲಾಖೆಯ ಪೇದೆಯೊಬ್ಬರು ಅಕ್ರಮ ಮರುಳು ಸಾಗಾಣಿಕೆ ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿಯ ಸಾವಾಗಿದೆ. ನಿಮಗೆ ಏನು ಅನಿಸುವುದಿಲ್ಲವೇ ? ಎಂದು ಖಾರವಾಗಿ ಪ್ರಶ್ನಿಸಿದರು.

ಅಪ್ರಾಪ್ತರಿಗೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಥರ್ಡ್ ಕ್ವಾಲಿಟಿ ಲಿಕ್ಕರ್ ಹಾಗೂ ಕಳ್ಳಭಟ್ಟಿ ಮಾರಾಟ ಮಾಡಲಾಗುತ್ತಿರುವ ಕುರಿತು ದೂರುಗಳಿವೆ ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿಗಳು 300 ಕ್ಕೂ ಅಧಿಕ ಕೇಸುಗಳು ದಾಖಲಿಸಲಾಗಿದೆ ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರು ಹಾಗೂ ಮಹಿಳೆಯರು ಕಾಣೆಯಾಗುತ್ತಿರುವ ಕುರಿತು ವರದಿಗಳಿವೆ ಈ ಬಗ್ಗೆ ಮಾಧ್ಯಮಗಳು ಕೂಡಾ ವರದಿ ಮಾಡಿವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.

” ಸಿಪಿಐ, ಪಿಎಎಸ್‌ಐ ಹಾಗೂ ಪಿಸಿಗಳೇ ರೌಡಿಗಳನ್ನು ಸಾಕುತ್ತಿದ್ದೀರಿ. ನಿಮ್ಮಿಂದಲೇ ಜಿಲ್ಲೆಯ ಮರ್ಯಾದೆ ಹಾಳಾಗುತ್ತಿದೆ. ರೌಡಿಗಳ ಹುಟ್ಟುಹಬ್ಬಕ್ಕೆ ಪೊಲೀಸ್ ಅಧಿಕಾರಿಗಳು ಹೋಗುತ್ತಾರೆ. ಆಚರಣೆಗೆ ಐಬಿಗಳಲ್ಲಿ ಅನುಮತಿ ನೀಡಲಾಗುತ್ತಿದೆ. ಈ ಹಿಂದಿನ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯೊಬ್ಬನ ಹುಟ್ಟುಹಬ್ಬಕ್ಕೆ ಹೋಗಿ ವಿಷ್ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಪೊಲೀಸರು ರೌಡಿಗಳಿಗೆ ಅಣ್ಣಾ ಎಂದು ಸಂಬೋಧಿಸುತ್ತಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮ ಯೂನಿಫಾರ್ಮ್ ಗಾದರೂ ಮರ್ಯಾದೆ ಬೇಡವೇ ?. ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ ಇಂತಹ ಚಟುವಟಿಕೆಗಳು ಕೂಡಲೇ ನಿಲ್ಲಬೇಕು. ನೀವು ರೌಡಿಗಳೊಂದಿಗೆ ಬೆರೆಯುವುದು ಕಂಡುಬoದರೆ ಕ್ರಮಕೈಗೊಳ್ಳುತ್ತೇನೆ. ಇದು ನಿಮ್ಮಮರ್ಯಾದೆಯಲ್ಲ ನಮ್ಮ ಸರ್ಕಾರದ ಮರ್ಯಾದೆಯ ಪ್ರಶ್ನೆ ಎಂದು ಖಡಕ್ ಎಚ್ಚರಿಕೆ ನೀಡಿ, ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಸಿಬ್ಬಂದಿ ಹಾಗೂ ರೈಟರ್ಸ್ ಗಳನ್ನು ವರ್ಗಾ ಮಾಡಿ ಎಂದು ನಗರ ಪೊಲೀಸ್ ಕಮೀಷನರ್ ಹಾಗೂ ಎಸ್ ಪಿ ಗೆ ಸೂಚಿಸಿದರು.
ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ನಡೆಯುತ್ತಿರುವ ಇಲಾಖೆ ತನಿಖೆಗಳನ್ನು ಪೂರ್ಣಗೊಳಿಸುವಂತೆ ಕಮೀಷನರ್ ಹಾಗೂ ಎಸ್ ಪಿ ಗೆ ಸೂಚಿಸಿದ ಖರ್ಗೆ, ನಗರ ವ್ಯಾಪ್ತಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಯೂನಿವರ್ಸಿಟಿ ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳು ವಿವಾದಿತ ಸಿವಿಲ್ ಕೇಸ್ ಗಳ ಸೆಟಲ್ ಮೆಂಟ್ ಅಡ್ಡಾಗಳಾಗಿವೆ, ಅಧಿಕಾರಿಗಳು ಬೀಟ್ ಗೆ ಹೋಗುವುದಿಲ್ಲ ಎಂದು ದೂರುಗಳು ಬಂದಿವೆ ಎಂದ ಸಚಿವರು ಈ ವಿಷಯವನ್ನು ಕಮೀಷನರ್ ಗಮನಕ್ಕೆ ತಂದು ಸರಿಪಡಿಸುವಂತೆ ಸೂಚಿಸಿದರು.
ಪ್ರತಿ ಪೊಲೀಸ್ ಸ್ಟೇಷನ್ ಗಳಿಂದ ನಮ್ಮಿಬ್ಬರು ಸಚಿವರಿಗೆ 20,000 ಕೊಡಬೇಕು ಎಂದು ವದಂತಿಗಳಿವೆ. ಯಾರಾದರೂ ನಮ್ಮ ಹೆಸರು ಹೇಳಿ ವಸೂಲಿಗೆ ಇಳಿದರೆ ಅಂತವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಕ್ರಮ ಮರುಳು ಸಾಗಾಣಿಕೆ ಮಾಡುವ ಜಾಲದಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳ ನೀಡುವ ದರಪಟ್ಟಿಯನ್ನು ಓದಿ ಹೇಳಿದ ಸಚಿವರು ಈ ಪಟ್ಟಿ ಪ್ರಕಾರ ಅಕ್ರಮ ಮರುಳುದಾರರಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಖಡಕ್ ಸೂಚನೆ ನೀಡಿ, ಯಾರ ವಿರುದ್ದ ಗಡಿಪಾರು ಆದೇಶಗಳು ಇವೆಯೋ ಅವುಗಳನ್ನು ಹಾಗೆ ಮುಂದುವರೆಸಿ ಎಸ್ ಪಿ ಸೂಚಿಸಿದರು.
ಸರ್ಕಾರದ ಬಗ್ಗೆ ತಪ್ಪು ಮಾಹಿತಿನೀಡಿ ಸೋಷಿಯಲ್ ಮೀಡಿಯಾದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವವರನ್ನು ಪತ್ತೆ ಮಾಡಿ. ಇತ್ತೀಚಿಗೆ ನಡೆದ ಪೇದೆ ಹತ್ಯೆ ನಾನೇ ಮಾಡಿರುವಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಲಾಗುತ್ತಿದೆ ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬುವ ಪೋಸ್ಟಗಳನ್ನು ನಿರಂತರವಾಗಿ ನೋಡಲು ಒಂದು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಿ ಸುಳ್ಳು ಸುದ್ದಿ ಹರಡುವವರ ವಿರುದ್ದ ತೀಕ್ಷ್ಣ ಕಾನೂನು ಕ್ರಮ ಕೈಗೊಳ್ಳಿ. ಗೋವು ರಕ್ಷಕರು ಎಂದು ಹೇಳಿಕೊಂಡು ಕೆಲ ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿ ಸಲು ಯತ್ನಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಖರ್ಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಭನ್ವರ್ ಸಿಂಗ್ ಮೀನಾ, ನಗರ ಪೊಲೀಸ್ ಕಮೀಷನರ್ ಆರ್. ಚೇತನ್, ಪ್ರಭಾರಿ ಅಪರ ಜಿಲ್ಲಾಧಿಕಾರಿ ರಾಚಪ್ಪ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್ ಪಿ ಇಶಾಪಂತ್, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಎಸಿಪಿ ದೀಪನ್ ಎನ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಯಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here