ಕಾಳಿಕಾದೇವಿಗೆ ಅವಮಾನವಾದಾಗ ಕಾಂಗ್ರೆಸ್ ನಾಯಕರ ಮೌನದಿಂದ ರಕ್ತ ಕುದಿಯುತ್ತಿದೆ: ಈಶ್ವರಪ್ಪ ಕಿಡಿ

0
493

ಕಲಬುರ್ಗಿ, ಜು.5- ಹಿಂದೂ ದೇವತೆ ಕಾಳಿಕಾದೇವಿಗೆ ಅವಮಾನ ಮಾಡಿದರೂ ಸಹ ಕಾಂಗ್ರೆಸ್ ನಾಯಕರು ಮೌನವಾಗಿರುವುದು ನಮ್ಮ ರಕ್ತ ಕುದಿಯುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳಿಗೆ ಅನ್ಯಾಯ, ದೌರ್ಜನ್ಯ ಹಾಗೂ ಅವಮಾನ ಆದಾಗ ಕಾಂಗ್ರೆಸ್ ನಾಯಕರು ಖಂಡಿಸುವುದಿಲ್ಲ. ಬಾಯಿ ಬಿಡುವುದಿಲ್ಲ. ಅದೇ ಮುಸ್ಲಿಂ ಸಮುದಾಯಕ್ಕೆ ಏನಾದರೂ ಆದರೆ ಇಲ್ಲದ ಆರೋಪಗಳನ್ನು ಮುಂದೆ ಮಾಡಿ ಪ್ರತಿಭಟನೆ, ಖಂಡನೆ ಮುಂತಾದವುಗಳನ್ನು ಮಾಡುತ್ತಾರೆ ಎಂದು ಹರಿಹಾಯ್ದರು.

ಶಿವಮೊಗ್ಗದ ಹರ್ಷ ಹಾಗೂ ರಾಜಸ್ಥಾನದ ಉದಯಪುರದ ಕನ್ಹಯ್ಯಲಾಲ್ ಅವರ ಹತ್ಯೆ ಪ್ರಕರಣದ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಹರ್ಷನ ಕೊಲೆ ಎಂದಿಗೂ ಖಂಡನೆ ಮಾಡಿಲ್ಲ. ಮುಸಲ್ಮಾನರನ್ನು ವೈಭವೀಕರಿಸುವ ನಾಟಕವನ್ನು ಹಿಂದೂ ಸಂಘಟನೆಗಳು ಸ್ಥಗಿತಗೊಳಿಸಿವೆ. ಅದಕ್ಕೆ ಸಿದ್ಧರಾಮಯ್ಯ ಅವರು ಖಂಡಿಸಿದರು ಎಂದು ಸಿದ್ಧರಾಮಯ್ಯ ಅವರ ವಿರುದ್ಧ ಈಶ್ವರಪ್ಪ ಅವರು ಕಿಡಿಕಾರಿದರು.
ಕಳೆದ 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೇವು. ಮೊಹ್ಮದ್ ಪೈಗಂಬರ್ ಅವರನ್ನು ಅಪಮಾನ ಮಾಡಿದ್ದಕ್ಕೆ ಇಡೀ ವಿಶ್ವದೆಲ್ಲೆಡೆ ಮುಸಲ್ಮಾನರು ಪ್ರತಿಭಟನೆ ಮಾಡಿದ್ದರು. ಇದೀಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಕುರಿತು ಯಾಕೆ ಖಂಡನೆ ವ್ಯಕ್ತವಾಗಿಲ್ಲ. ಈ ವಿಚಾರಕ್ಕೆ ಸಿದ್ಧರಾಮಯ್ಯ, ಕಾಂಗ್ರೆಸ್ ಅಧಿನಾಯಕಿ ಶ್ರೀಮತಿ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರು ಯಾಕೆ ಪ್ರತಿಕ್ರಿಯೆ ನೀಡಿಲ್ಲ? ನಮ್ಮ ರಕ್ತ ಕುದಿಯಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರನ್ನು ಕಟುವಾಗಿ ಟೀಕಿಸಿದ ಈಶ್ವರಪ್ಪ ಅವರು, ತನ್ನ ಪತ್ನಿಯನ್ನು ನಿಯಂತ್ರಣ ಮಾಡದೇ ಇದ್ದುದಕ್ಕೆ ಓಡಿ ಹೋಗುತ್ತಾಳೆ ಎಂದು ಶಿವಸೇನೆಯಲ್ಲಿನ ವಿಭಜನೆಯ ಕುರಿತು ಟೀಕಿಸಿದರು.
ಯಾವುದೇ ಪಕ್ಷದಲ್ಲಿ ಶಿಸ್ತು ಇಲ್ಲವಾದರೆ, ಯಾವ ಪಕ್ಷದಲ್ಲಿ ನಾಯಕತ್ವ ಇರುವುದಿಲ್ಲವೋ ಆ ಪಕ್ಷವು ಪ್ರಜಾಪ್ರಭುತ್ವದಲ್ಲಿ ಉಳಿಯುವುದಿಲ್ಲ. ಮಹಾರಾಷ್ಟçದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದ ತತ್ವ, ಸಿದ್ದಾಂತಗಳನ್ನು ಬದಿಗೊತ್ತಿ ಬಾಳಾಸಾಹೇಬ್ ಠಾಕ್ರೆ ಅವರ ಪುತ್ರ ಉದ್ಭವ್ ಠಾಕ್ರೆ ಅವರು ಹಿಂದೂತ್ವವನ್ನು ಮಾರಾಟ ಮಾಡಿದರು. ಶಿವಸೇನೆ ಶಾಸಕರನ್ನು ಹೈಜಾಕ್ ಮಾಡಿದರು. ಹೀಗಾಗಿ ಪಕ್ಷದಲ್ಲಿ ನಿಯಂತ್ರಣವನ್ನು ಉದ್ಭವ್ ಠಾಕ್ರೆ ಕಳೆದುಕೊಂಡರು ಎಂದು ಅವರು ವ್ಯಂಗ್ಯವಾಡಿದರು.
ಬರುವ ಆಗಸ್ಟ್ 3ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಿದ್ಧರಾಮೋತ್ಸವ ಕಾರ್ಯಕ್ರಮವನ್ನು ಟೀಕಿಸಿದ ಈಶ್ವರಪ್ಪ ಅವರು, ಯಾವಾಗ ವ್ಯಕ್ತಿಗಳು ತಿರಸ್ಕೃತ ಪಟ್ಟಿಯಲ್ಲಿ ಹೋಗುತ್ತಾರೆಯೋ ಅದಕ್ಕೆ ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಹಂಗಿಸಿದರು.
ಅದು ಸ್ವಯಂ ಪ್ರೇರಿತವಾಗಿ ಆಚರಿಸಿಕೊಳ್ಳುತ್ತಿರುವ ಕಾರ್ಯಕ್ರಮವಾಗಿದೆ. ರಾಜ್ಯವಲ್ಲದೇ ಇಡೀ ದೇಶದಲ್ಲಿ ಕಾಂಗ್ರೆಸ್ ತಿರಸ್ಕೃತ ಗುಂಪಿನಲ್ಲಿ ಹೋಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಮನೆಗೆ ಕಳಿಸಿದ್ದಾರೆ. ಮುಸ್ಲಿಂಮರಿಗೆ ಅಲ್ಲಾಹು ಅಕ್ಬರ್ ಹೆಗೆ ಮುಖ್ಯವೋ ಹಾಗೆಯೇ ಸಿದ್ಧರಾಮಯ್ಯ ಅವರಿಗೆ ಜಮೀರ್ ಹೋ ಅಕಬರ್ ಮುಖ್ಯವಾಗಿದೆ. ಮುಸಲ್ಮಾನರು ಇರುವ ಕ್ಷೇತ್ರದಲ್ಲಿಯೇ ಸಿದ್ಧರಾಮಯ್ಯ ಅವರು ಸ್ಪರ್ಧಿಸಲಿ. ಕಾಂಗ್ರೆಸ್ ಈವಾಗ ಇರುವಷ್ಟು ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ ಎಂದು ಅವರು ಲೇವಡಿ ಮಾಡಿದರು.

LEAVE A REPLY

Please enter your comment!
Please enter your name here